Month: ಡಿಸೆಂಬರ್ 2013

ಕಳೆದುಹೋದವರು..!

Posted on Updated on

ಸ್ವಾತಂತ್ರ್ಯ ನೆತ್ತಿಗೇರಿ
ಬಂಧನದ ಹಂಬಲ
ರೆಪ್ಪೆ ಬಡಿಯದೆ ಕೂತು
ತೆರೆದ ಬಾಗಿಲಿಗೆ ನೆಟ್ಟನೋಟ
ಹೇಳಿಕೊಳ್ಳದ ಸಂಕಟ..
ಸೋಂಬೇರಿ ಕಸಬರಿಗೆ
ಮೈಮುರಿಯುವುದೇ ಇಲ್ಲ
ಧೂಳು-ಕಸದ ಸ್ವಾತಂತ್ರ್ಯ ನಿರಾತಂಕ
ಮುದ್ದಾಡುತ್ತಿವೆ ಅವನನಪ್ಪಿ..
ಕರುಣೆ ಉಕ್ಕಿ ಹರಿದು
ಜೇಡ ಮಿಂದು ಪಾವನವಾಯ್ತು
ಸಿಂಗರಿಸುತ್ತಿದೆ ಮದುವೆಮನೆಯಂತೆ
ಮದುವಣಗಿತ್ತಿ ಕಿಸಕ್ಕನೆ ನಕ್ಕು
ಆತನಿಗೋ ಪುಕ್ಕಟೆ ಪುಳಕ..
ಮತ್ತೆ ಮುಂಜಾವದಲಿ
ಕನ್ನಡಿಯ ಮೇಲೊಂದು
ಬಿಂದಿಯಿದ್ದ ಕನಸು
ಮಿಡುಕುವ ಬಳೆಗಳ ಸದ್ದಿಗೆ
ಬಲವಂತದ ಎಚ್ಚರ..
ಲೆಕ್ಕವಿಲ್ಲದಷ್ಟು ಕನಸು
ತುಂಬಿತುಳುಕುವ ಕಸದ ಬುಟ್ಟಿ
ನಿಟ್ಟುಸಿರು ಕುಡಿದು
ಅಮಲುಗಣ್ಣಿನ ಹುಡುಗ
ಕಳೆದೇ ಹೋಗಿದ್ದಾನೆ ಹುಡುಕುತ್ತಾ
-ಎಲ್ಲಿರುವುದೋ ಅದು; ಎಂತಿರುವುದೋ ಅದು..!
-ವಿಜಯ ಕುಮಾರ್ ಕುಂಭಾಶಿ